ಹಾಸನ : ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಕೇಳಿಬಂದ ಲೈಂಗಿಕ ದೌರ್ಜನ್ಯ ಪ್ರಕರಣ ವಿಚಾರಣೆ ಹಂತದಲ್ಲಿರುವಾಗಲೇ ಅವರ ಸಹೋದರ ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ವಿರುದ್ಧ ಅಂತಹುದೇ ಆರೋಪ ಕೇಳಿಬಂದಿದೆ.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಕುಟುಂಬಕ್ಕೆ ಮಸಿ ಬಳಿಯಲು ರಾಜ್ಯದಲ್ಲಿ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆಯಾ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ. ಹಾಗಾದರೆ ಡಾ.ಸೂರಜ್ ಅವರ ವಿರುದ್ಧ ಕೇಳಿಬಂದ ಆರೋಪವೇನು. 5 ಕೋಟಿ ರೂ. ನೀಡುವಂತೆ ಬ್ಲ್ಯಾಕ್ ಮೇಲ್ ಮಾಡಿದ್ಯದಾರು ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ಅರಕಲಗೂಡು ತಾಲ್ಲೂಕು ಕೊಳ್ಳಂಗಿ ಗ್ರಾಮದ ಚೇತನ್ ಎಂಬಾತ ಸೂರಜ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದ. ಮತ್ತು ಅದನ್ನು ಯಾರಿಗೂ ಹೇಳಬಾರದೆಂದರೆ 5 ಕೋಟಿ ರೂ. ನೀಡಬೇಕು ಎಂದು ಬ್ಲ್ಯಾಕ್ಮೇಲ್ ಮಾಡಿದ್ದಾಗಿ ಹೊಳೆನರಸೀಪುರ ಠಾಣೆಯಲ್ಲಿ ಸೂರಜ್ ರೇವಣ್ಣ ಅವರ ಆಪ್ತ ಶಿವಕುಮಾರ್ ಶುಕ್ರವಾರ ಎಫ್ಐಆರ್ ದಾಖಲಿಸಿದ್ದಾರೆ. ಅರಕಲಗೂಡು ತಾಲ್ಲೂಕು ಕೊಳ್ಳಂಗಿ ಗ್ರಾಮದ ಚೇತನ್ ಹಾಗು ಅವರ ಭಾವನ ವಿರುದ್ದ ಶಿವಕುಮಾರ್ ಪ್ರಕರಣ ದಾಖಲಿಸಿದ್ದಾರೆ.
ಮೊದಲು ಐದು ಕೋಟಿಗೆ ಬೇಡಿಕೆಯಿಟ್ಟಿದ್ದ ಆತ ಹಣ ಕೊಡುವುದು ಅಸಾಧ್ಯ ಎಂದಾಗ 3 ಕೋಟಿ ರೂ.ಗೆ ಬೇಡಿಕೆಯಿಟ್ಟ. ಹಣ ಯಾಕೆ ಕೊಡಬೇಕೆಂದು ಮತ್ತೆ ಪ್ರಶ್ನಿಸಿದಾಗ ಕನಿಷ್ಠ 2.50 ಕೋಟಿ ರೂ. ಕೊಡಿಸು ಎಂದು ಕೇಳಿದ. ನೀನು ಹಣ ಕೊಡಿಸದಿದ್ದರೆ ನನಗೆ 1 ಕೋಟಿ ರೂ. ಕೊಡಲು ದೊಡ್ಡಮಟ್ಟದಲ್ಲಿ ತಯಾರಿದ್ದಾರೆ ಎಂದೂ ಹೇಳಿದ್ದ ಎಂದು ಶಿವಕುಮಾರ್ ಆರೋಪಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಅವರ ಮರ್ಯಾದೆ ಕಳೆಯಬೇಕೆಂಬ ಉದ್ದೇಶದಿಂದ ಚೇತನ್ ಹಾಗು ಅವರ ಭಾವ ಈ ಷಡ್ಯಂತ್ರ ಹೂಡಿದ್ದು, ಇದರ ಹಿಂದೆ ದೊಡ್ಡ ದೊಡ್ಡವರ ಕೈವಾಡವಿರುವ ಶಂಕೆಯಿದೆ. ಪ್ರಕರಣದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕೆಂದು ಶಿವಕುಮಾರ್ ಆಗ್ರಹಿಸಿದ್ದಾರೆ.
0 Comments