ಚನ್ನರಾಯಪಟ್ಟಣ: ಕೆಸರು ಮೆತ್ತಿದ್ದ ಕಾಲು ತೊಳೆಯಲೆಂದು ನಾಲೆಗೆ ಇಳಿದಿದ್ದ ಮಹಿಳೆ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಮಲ್ಲವನಘಟ್ಟ ಸಮೀಪ ನಡೆದಿದೆ.
ಪಟ್ಟಣದ ಗಾಯತ್ರಿ ಬಡಾವಣೆ ನಿವಾಸಿ ಎಸ್.ಟಿ. ಸಾವಿತ್ರಮ(50) ಮೃತರು. ಎಲ್ಐಸಿ ಏಜೆಂಟರಾಗಿದ್ದ ಸಾವಿತ್ರಮ ಬುಧವಾರ ಬೆಳಿಗ್ಗೆ ಗೌಡಗೆರೆ ಹೊಸೂರು ಗ್ರಾಮಕ್ಕೆ ತಮ ದ್ವಿಚಕ್ರ ವಾಹನದಲ್ಲಿ ಕಾರ್ಯನಿಮಿತ್ತ ತೆರಳಿದ್ದರು. ಕೆಲಸ ಮುಗಿಸಿ ವಾಪಾಸ್ ಬರುತ್ತಿದ್ದಾಗ ಕಾಲಿಗೆ ಕೆಸರು ಮೆತ್ತಿಕೊಂಡಿದ್ದು ಅದನ್ನು ತೊಳೆದುಕೊಳ್ಳಲೆಂದು ಮಲ್ಲವ್ವನಘಟ್ಟ ಬಳಿ ಗಾಡಿ ನಿಲ್ಲಿಸಿ ನಾಲೆಯ ತಿರುವಿನ ಸಿಮೆಂಟ್ ಇಳಿಜಾರಿಗೆ ತೆರಳಿದ್ದರು.
ಕಾಲು ಜಾರಿ ನೀರಿಗೆ ಬಿದ್ದಿದ್ದರು. ಪತಿ ನಾಗರಾಜ್ ಹಾಗು ಸಂಬಂಧಿಕರು ಹುಡುಕಾಟಕ್ಕಾಗಿ ಹೊಸೂರು ಕಡೆಗೆ ತೆರಳುತ್ತಿದ್ದ ವೇಳೆ ನಾಲೆ ಬಳಿ ದ್ವಿಚಕ್ರ ವಾಹನ ಕಂಡಿದೆ. ನಾಲೆಯ ಬಳಿ ಚಪ್ಪಲಿ ಸಿಕ್ಕಿವೆ.
ಗುರುವಾರ ಮಧ್ಯಾಹ್ನ 3 ಗಂಟೆಗೆ ಡಿಂಕ ಗ್ರಾಮದ ಬಳಿ ಮೃತದೇಹ ಪತ್ತೆಯಾಗಿದ್ದು ಶ್ರವಣಬೆಳಗೊಳ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ತುಮಕೂರು ಜಿಲ್ಲೆ ಹೆಬ್ಬೂರು ಹೋಬಳಿ ಗೋವಿಂದರಾಜಪುರ ಗ್ರಾಮದಲ್ಲಿ ಶುಕ್ರವಾರ ಅಂತ್ಯಕ್ರಿಯೆ ನೆರವೇರಲಿದೆ. ಮೃತರಿಗೆ ಪತಿ ಹಾಗು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಶ್ರವಣಬೆಳಗೊಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 Comments